ನಂತರ ಅವರು ಪ್ರತಿಷ್ಠಿತ ರಾಷ್ತ್ರೀಯ ರಕ್ಷಣಾ ಅಕಾಡೆಮಿಯಲ್ಲಿ ವ್ಯಾಸಂಗವನ್ನು ಮಾಡಿದರು. ಬಳಿಕ ಭಾರತೀಯ ಮಿಲಿಟರಿ ಅಕಾಡೆಮಿಯಿಂದ ಒಬ್ಬ ಕಮಿಷನ್ಡ್ ಆಫೀಸರ್ ಆಗಿ ಭಾರತೀಯ ಸೈನಿಕ ಪಡೆಯನ್ನು ಸೇರಿದರು. ೧೯೭೧ರ ಪಾಕ್ ಯುದ್ದದಲ್ಲಿ ಸೇವೆ ಸಲ್ಲಿಸಿದ ನಂತರ, ಕಾಶ್ಮೀರ, ಭೂತಾನ್, ಅಸ್ಸಾಮ್, ರಾಜಸ್ಥಾನ ಹೀಗೆ ದೇಶದ ಉದ್ದಗಲಕ್ಕೂ ಸೇವೆ ಸಲ್ಲಿಸಿದರು.
’ಗೋಪಿ’ ಎಂದು ಅವರ ಹತ್ತಿರದವರಿಂದ ಕರೆಯಲ್ಪಡುವ ಅವರು, ಭಾರತೀಯ ಸೈನ್ಯದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಕಮಿಷನ್ಡ್ ಆಫೀಸರ್ ಆಗಿ ಸೇವೆ ಸಲ್ಲಿಸಿದರು. ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುತ್ತ, ಸೈನ್ಯದಲ್ಲಿ ಸೇರಿದ್ದರಿಂದ, ತಮ್ಮ ದೈಹಿಕ ಹಾಗು ಮಾನಸಿಕ ಸಾಮರ್ಥ್ಯದ ಬಗ್ಗೆ ತಮಗೆ ಅರಿವುಂಟಾಯ್ತು ಎಂದು ಹೇಳುತ್ತಾರೆ. ’ಇದು ನನಗೆ ಒಂದು ಒಳ್ಳೆಯ ಕಲಿಕೆಯ ಅನುಭವ ನೀಡಿತು. ಶಿಸ್ತು, ತಂಡದೊಡನೆ ಸಾಮರಸ್ಯ, ಕೆಲಸ ಮಾಡುವುದು ಹಾಗೂ ದೇಶದ ವೈವಿಧ್ಯಗಳ ಬಗ್ಗೆ ನನಗೆ ಅರಿವು ಉಂಟಾಯ್ತು.”
ಸೈನ್ಯದ ಕಷ್ಟ, ಘೋರತೆಗಳು, ಅವರಲ್ಲಿದ್ದ ಸ್ವತಂತ್ರ ದುಡಿಮೆಯ ಹಂಬಲವನ್ನು ಸ್ವಲ್ಪವೂ ಕಡಿಮೆ ಮಾಡಲಿಲ್ಲ. ಸೈನ್ಯದ ಬಂಧನಗಳು ಅವರನ್ನು ತಮ್ಮ ವೃತ್ತಿಗೆ ರಾಜಿನಾಮೆ ನೀಡಲು ಪ್ರೇರೇಪಿಸಿ, ತಮ್ಮ ಪೂರ್ವಿಕರ ಗ್ರಾಮಕ್ಕೆ ಕೇವಲ ಆರು ಸಾವಿರ ರೂಪಾಯಿ ಮತ್ತು ಅದಮ್ಯ ಉತ್ಸಾಹದೊಂದಿಗೆ ಹಿಂತಿರುಗುವಂತೆ ಮಾಡಿತು.
ವಿಧಿ ಲಿಖಿತ ಎಂಬಂತೆ, ಆ ದಿನಗಳಲ್ಲಿ, ಹೇಮಾವತಿ ನದಿಯ ಆಣೆಕಟ್ಟೆಗಾಗಿ ಸರಕಾರವು ರೈತರ ಜಮೀನನ್ನು ವಶಪಡಿಸಿಕೊಂಡು, ಜಾವಗಲ್ ಸಮೀಪ ಪರಿಹಾರ ರೂಪದಲ್ಲಿ ಜಮೀನನ್ನು ನೀಡುತ್ತಿತ್ತು. ಗೋಪಿನಾಥ್ ಪಾಲಿಗೆ ದಕ್ಕಿದ್ದು ಕಲ್ಲು ಮುಳ್ಳು ಪೊದೆಗಳಿಂದ ಆವೃತವಾದ ಬಂಜರು ಭೂಮಿ. ಗೋಪಿನಾಥ್ ಖಿನ್ನರಾಗದೆ ತಮ್ಮ ಸ್ವಂತ ಪರಿಶ್ರಮ ಹಾಗು ದುಡಿಮೆಯಿಂದ ಬಂಜರು ನೆಲದಲ್ಲಿ ಕೃಷಿ ಪ್ರಾರಂಭ ಮಾಡಿ, ಕೆಲವೇ ವರ್ಷಗಳಲ್ಲಿ ರಾಜ್ಯದ ಅತ್ಯಂತ ಯಶಸ್ವೀ ರೇಶ್ಮೆ ಬೆಳೆಗಾರರೆಂಬ ಹೆಸರು ಗಳಿಸಿದರು.




